ದಿವಂಗತ ಕೊ. ಚನ್ನಬಸಪ್ಪನವರು ಕನ್ನಡ ಕಾನೂನು ಹಾಗೂ ಪುಸ್ತಕ ಪ್ರಪಂಚ ಕಂಡ ಧೀಮಂತ ವ್ಯಕ್ತಿ. ಮಾನ್ಯರು, ಬಳ್ಳಾರಿಯಲ್ಲಿ ವಕೀಲಿಕೆ ಆರಂಭಿಸಿ, ಮುಂದೆ ಸಾರ್ವಜನಿಕ ಅಭಿಯೋಜಕರು ಹಾಗೂ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಲ್ಲದೇ ನೇರ ಹಾಗೂ ಸ್ಪಷ್ಟ ಅಭಿಪ್ರಾಯಗಳನ್ನು ಹೊಂದಿದ ಇವರು ಅನೇಕ ಪುಸ್ತಕಗಳನ್ನೂ ಬರೆದು, ಕನ್ನಡ ಸಾಹಿತ್ಯ ಕ್ಷೇತ್ರವನ್ನೂ ಸಹ ಶ್ರೀಮಂತಗೊಳಿಸಿದ್ದಾರೆ. ಈ ಪುಸ್ತಕವನ್ನು ನನ್ನ ಗೆಳಯ ಹಾಗೂ ಸಹೋದ್ಯೋಗಿಯಾದ ಶ್ರೀ ರಾಜು ಚೌಡಪ್ಪ, ವಕೀಲರು, ದೊಡ್ಡಬಳ್ಳಾಪುರ ಇವರ ಭಂಡಾರದಿಂದ ಎರವಲು ಪಡೆದಿದ್ದು.
ಕನ್ನಡದಲ್ಲಿ ಕಾನೂನು ಕುರಿತ ಬರಹಗಳು ಸಿಗುವುದೇ ಕಷ್ಟಕರವಾಗಿರುವ ದಿನಗಳಲ್ಲಿ ಈ ಪುಸ್ತಕ ಮರುಭೂಮಿಯಲ್ಲಿ ಓಯಾಸಿಸ್ಸಿನಂತೆ ದೊರಕಿತು. ಈ ಪುಸ್ತಕವು ಯಾವುದೋ ಹಳೇ ಪ್ರಕರಣಗಳನ್ನಷ್ಟೇ ವಿವರಿಸದೇ, ಆ ಪ್ರಕರಣಗಳನ್ನು ನಿರ್ವಹಿಸಿದ ವಕೀಲರು ಹಾಗೂ ನ್ಯಾಯಾಧೀಶರುಗಳ ಕಾರ್ಯವೈಖರಿಯನ್ನೂ ಸಹ ತಿಳಿಸುತ್ತದೆ. ಇಲ್ಲಿನ ಕಥೆಗಳ ಮೂಲಕ ವಕೀಲರಿಗೆ ಕೋರ್ಟಿನಲ್ಲಿ ವಾದ ಮಂಡಿಸುವಾಗ ಹಾಗೂ ಪಾಟೀ ಸವಾಲು ಮಾಡುವಾಗ ಇರಬೇಕಾದ ಸ್ಪಷ್ಟತೆ ಹಾಗೂ ಕೆಚ್ಚಿನ ಕುರಿತು ಪಾಠ ಹೇಳುತ್ತದೆ ಈ ಪುಸ್ತಕ.
ಈ ಪುಸ್ತಕವನ್ನು IBH ಪ್ರಕಾಶನ ಇವರು ಪ್ರಕಾಶಿಸಿದ್ದು. ನಾನು ಓದಿದ ಪ್ರತಿ 1981ರದ್ದು. ಸುಮಾರು 198 ಪುಟಗಳಲ್ಲಿ 20 ಕಥೆಗಳಿದ್ದಿದ್ದರಿಂದ, ಮೇಲಾಗಿ ಮಾತೃ ಭಾಷಾ ಪುಸ್ತಕವಾಗಿದ್ದರಿಂದ 4-5 ದಿನಗಳಲ್ಲಿ ಓದಿ ಮುಗಿಸಿದೆ. ಸ್ಪಷ್ಟ ಬರಹ ಹಾಗೂ, ಶೀರ್ಷಿಕೆಯೇ ಹೇಳಿದಂತೆ ಸತ್ಯ ಕಥನಗಳು, ನನ್ನನ್ನು ತಮ್ಮಲ್ಲಿ ಹಿಡಿದಿಟ್ಟುಕೊಂಡಿದ್ದವು. ಈಗ ಈ ಪುಸ್ತಕ ಮುದ್ರಣದಲ್ಲಿ ಇರುವುದು ಸಂಶಯವೇ. ಪ್ರಕಾಶಕರು ಪುನರ್ ಮುದ್ರಿಸಿದರೆ ಫಟ್ ಎಂದು ಮಾರಾಟವಾಗುವುದಲ್ಲದೇ, ಇದನ್ನೋದಿದ ವಕೀಲರ ಜೀವನದಲ್ಲಾಗಬಹುದಾದ ಧನಾತ್ಮಕ ಬದಲಾವಣೆ ಕುರಿತು ನನಗಾವುದೇ ಸಂಶಯವಿಲ್ಲ.